ಶ್ರೀ ಕೃಷ್ಣ ಮತ್ತು ಎಂಟರ ಸಂಖ್ಯೆ
ಇದರ ಒಂದು ಕಿರು ಮಾಹಿತಿ
ಮೊದಲನೆಯದಾಗಿ ಭಗವಾನ್ ಶ್ರೀಕೃಷ್ಣ ದೇವಕಿ ಹಾಗೂ ವಸುದೇವರ
8 ನೇ ಮಗನಾಗಿ ಭೂಮಿಯ ಮೇಲೆ ಜನ್ಮತಾಳಿದ.
ಇನ್ನು ಭಗವಾನ್ ಕೃಷ್ಣನ ಜನನವಾಗಿದ್ದು 8ನೇ ಮನ್ವಂತರದ, ಅಷ್ಟಮಿಯ ದಿನವೇ ಎಂಬುದು ಕೂಡಾ ಸತ್ಯ.
ಅದಕ್ಕೆ ಕೃಷ್ಣಾಷ್ಟಮಿ ಎಂದೇ ಆ ದಿನವನ್ನು ಸಂಭ್ರಮದಿಂದ ಆಚರಿಸಿ ಆನಂದಿಸುವರು ಭಕ್ತವೃಂದ.
ಎರಡನೆಯದಾಗಿ, ಶ್ರೀಕೃಷ್ಣ ಭಗವಾನನಿಗೆ ಅಷ್ಟ ಪತ್ನಿಯರು ಎಂಬುದು ಒಂದು ಪ್ರಮುಖ ವಿಷಯ
ರುಕ್ಮಿಣಿ, ಜಾಂಭವತಿ, ಸತ್ಯಭಾಮೆ, ಮಿತ್ರವಿಂದ, ಲಕ್ಷ್ಮಣಾ, ಸತ್ಯ, ಭದ್ರ, ಕಾಳಿಂದಿ.
ಈ ಎಂಟು ಜನ ಭಗವಂತನ ಕೃಷ್ಣ ಅವತಾರದಲ್ಲಿ ಆತನ ಅಷ್ಟಭಾರ್ಯೆಯರೇ ಎಂದು ಆರಾಧಿಸಲ್ಪಟ್ಟಿದ್ದಾರೆ.
ಇನ್ನು ಶ್ರೀಕೃಷ್ಣ ಪರಮಾತ್ಮನ ಆಪ್ತ ಮಿತ್ರರ ಸಂಖ್ಯೆ ಕೂಡಾ ಎಂಟು,
ಶ್ರೀಧಾಮ, ಸುಧಾಮ, ಸುಬಲ,ಸ್ತೋಕ ಕೃಷ್ಣ, ಅರ್ಜುನ, ವೃಷಬಂಧು,ಸುಭಗ್ , ಬಲಿ, ಪ್ರಾಣಭಾನು ಎಂಬವವರೇ ಆ ಅಷ್ಟ ಮಿತ್ರರು.
ಈ ಹೆಸರುಗಳು ಆದಿ ಪುರಾಣದಲ್ಲಿ ನಮೂದಿತವಾಗಿವೆ. ಹೀಗೆ ಪತ್ನಿಯರು ಎಂಟು , ಆಪ್ತ ಮಿತ್ರರೂ ಎಂಟು ಭಗವಾನ್ ಶ್ರೀಕೃಷ್ಣ ಪರಮಾತ್ಮನಿಗೆ.
ಇನ್ನು ಪತ್ನಿಯರು ಹೊರತು ಪಡಿಸಿದರೆ, ಶ್ರೀಕೃಷ್ಣ ಪರಮಾತ್ಮನಿಗೆ ಇದ್ದ ಆಪ್ತ ಸಖಿಯರ ಸಂಖ್ಯೆ ಕೂಡಾ ಎಂಟು
ಎಂದರೆ ಆಶ್ಚರ್ಯವಾಗುತ್ತದೆ.
ಚಂದ್ರಾವಳಿ, ಭದ್ರಾ, ಶ್ಯಾಮಾ, ಶೈವ್ಯಾ, ಪಗ್ಯಾ, ರಾಧಾ, ಲಲಿತಾ, ವಿಶಾಖಾ ಎಂಬುವವರೇ ಆ ಅಷ್ಟ ಸಖಿಯರು.
ಆದರೆ ಈ ಹೆಸರುಗಳು ಕೆಲವೆಡೆ ಬೇರೆಯಾಗಿ ನಮೂದಿಸಲಾಗಿದ್ದರೂ, ಸಾಮ್ಯತೆಯಂತೂ ಇದ್ದೇ ಇದೆ.
ಇನ್ನು ಕೃಷ್ಣನ ಹೆಸರಿನಿಂದ ಆತನ ಮಹಿಮೆಗಳಿಂದ ಪಾವನವೆನಿಸಿರುವ ಕೃಷ್ಣ ನಗರಗಳೆಂದೇ ಖ್ಯಾತಿ ಪಡೆದಿರುವ ಪವಿತ್ರ ಎಂಟು ಸ್ಥಳಗಳಿವೆ.
ಮಥುರಾ, ಗೋಕುಲ, ನಂದಗಾಂವ್, ಬೃಂದಾವನ, ಗೋವರ್ಧನ, ಬರ್ಸಾನಾ, ಮಧುವನ ಹಾಗೂ ದ್ವಾರಿಕಾ. ಈ ಅಷ್ಟನಗರಗಳು ಶ್ರೀಕೃಷ್ಣ ನು ನಡೆದಾಡಿದ ಪಾವನ ಭೂಮಿ ಎನಿಸಿದ್ದವು.
ಒಟ್ಟಾರೆ ಶ್ರೀಕೃಷ್ಣ ಹಾಗೂ ಅಷ್ಟ ಅಂದರೆ ಎಂಟು ಈ ಸಂಖ್ಯೆಗೆ ಇರುವ ಸಂಬಂಧ ನಿಜವಾಗಿಯೂ ರೋಚಕ ಹಾಗೂ ಅದ್ಭುತ.
ಕೃಷ್ಣಾರ್ಪಣಮಸ್ತು.
No comments:
Post a Comment
welcome to dgnsgreenworld Family