ಶ್ರೀ ಶಿವಕುಮಾರ ಸ್ವಾಮಿಜಿ (1907~2019) ಜೀವನಚರಿತ್ರೆ
ಶತಾಯುಷಿ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ಧಪುರುಷರು ಸಿದ್ದಗಂಗೆಯ ಪೂಜ್ಯ ಸ್ವಾಮೀಜಿಯವರು.
ಬಾಲ್ಯ-ವೈರಾಗ್ಯ-ವಿರಕ್ತಾಶ್ರಮ
ಡಾ.ಶಿವಕುಮಾರ ಸ್ವಾಮೀಜಿ 01.04.1907ರಲ್ಲಿ ಮಾಗಡಿ ತಾಲೂಕಿನ ವೀರಾಪುರದಲ್ಲಿ ಹೊನ್ನಪ್ಪ ಪಟೇಲ್ ಮತ್ತು ಗಂಗಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿಯಲ್ಲಿ ಮುಗಿಸದ ಶ್ರೀಗಳು ತುಮಕೂರಿನ ಸರಕಾರಿ ಶಾಲೆಯಲ್ಲಿ ಫ್ರೌಡ ಶಿಕ್ಷಣವನ್ನು ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಶ್ರೀಗಳು ಆಂಗ್ಲಭಾಷೆ ಮತ್ತು ಸಂಸ್ಕೃತ ಬಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ.
ಅನೀರೀಕ್ಷೀತ ಮಠಾಧಿಪತಿ
ಬೆಂಗಳೂರಿನ ಗುಬ್ಬಿ ತೋಟದಪ್ಪ ಛತ್ರದಲ್ಲಿದ್ದುಕೊಂಡು, ಪದವಿ ವಿಧ್ಯಾಭ್ಯಾಸ ಮಾಡುತ್ತಿದ್ದರು. 1930 ರಲ್ಲಿ ಉದ್ಧಾನ ಶಿವಯೋಗಿಗಳ ನಂತರದ ಉತ್ತರಾಧಿಕಾರಿ ಸ್ವಾಮಿಗಳಾದ ಶ್ರಿ ಮರುಳಾಧ್ಯರ ನಿಧನರಾಗುತ್ತಾರೆ. ಅವರ ಸಮಾಧಿ ಕಾರ್ಯಕ್ರಮಗಳಿಗೆ ಬಂದಿದ್ದ ಮೊದಲೇ ಪರಿಚಯವಿದ್ದ ಶಿವಕುಮಾರ ಸ್ವಾಮಿಗಳ ಕಡೆಗೆ ಉದ್ಧಾನ ಶಿವಯೋಗಿಗಳ ನೋಟ ಹರಿಯುತ್ತದೆ.ತಕ್ಷಣವೇ ಉದ್ಧಾನ ಶಿವಯೋಗಿಗಳು ಶಿವಣ್ಣನೇ ತಮ್ಮ ಮುಂದಿನ ಉತ್ತರಾಧಿಕಾರಿ ಎಂದು ಘೋಷಿಸುತ್ತಾರೆ.
ಹೀಗೆ ಸನ್ಯಾಸಿಯಾದ ಶಿವಕುಮಾರ ಸ್ವಾಮಿಗಳು ತಮ್ಮ ಸನ್ಯಾಸ ಧರ್ಮಗಳನ್ನು ಪಾಲಿಸುತ್ತಲೇ ಪದವಿ ಮುಗಿಸಿ ನಂತರ 1930ರಲ್ಲಿ ತಮ್ಮ ಯವ್ವನಾವಸ್ಥೆಯಲ್ಲಿಯೇ ವಿರಕ್ತಾಶ್ರಮ ದೀಕ್ಷೆ ಪಡೆದು ಸಿದ್ಧಗಂಗಾ ಕ್ಷೇತ್ರ ಪ್ರವೇಶಿಸಿದರು. ಅಂದಿನಿಂದ ಸಿದ್ಧಗಂಗಾ ಮಠದಲ್ಲಿ ಹೊಸ ಬೆಳಕು ಮೂಡಿತು. ಜಂಗಮ ಮೂರ್ತಿಗಳಾದ ಶಿವಕುಮಾರ ಮಹಾಸ್ವಾಮಿಗಳು ಉದ್ಧಾನ ಶಿವಯೋಗಿಗಳ ಅಣತಿಯಂತೆ 1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ಸಿದ್ಧಗಂಗಾ ಕ್ಷೇತ್ರದ ಸ್ವರೂಪ ಆಮೂಲಾಗ್ರವಾಗಿ ಬದಲಾವಣೆಯಾಯಿತು.
ತ್ರಿವಿಧ ದಾಸೋಹಿ
ಈ ಶತಮಾನ ಕಂಡ ಅಪರೂಪದ ಶರಣರಾಗಿರುವ ಶ್ರೀಗಳು ಅನ್ನ,ಅಕ್ಷರ ಮತ್ತು ಜ್ಞಾನ ದಾಸೋಹಗಳ ಮೂಲಕ ತ್ರಿವಿಧ ದಾಸೋಹದಲ್ಲಿ ತೊಡಗಿದ್ದಾರೆ.
ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರ ಅಡಿಯಲ್ಲಿ ಬಾಲ್ಯದಿಂದ ಪದವಿಯವರೆಗೂ ಸಂಪೂರ್ಣ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಇಲ್ಲಿ ಯಾವುದೇ ಜಾತಿ-ಧರ್ಮ ಭೇದವಿಲ್ಲದೇ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಂದಿಗೆ ಉಚಿತ ವಸತಿ ಮತ್ತು ಉಚಿತ ಆಹಾರ ಕೂಡ ನೀಡಲಾಗುತ್ತದೆ.ಪ್ರಸ್ತುತ ಸುಮಾರು 10000 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ಕರ್ನಾಟಕದ ವಿವಿಧ ಮೂಲೆಗಳಿಂದ ವಿಧ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಮಾತ್ರವಲ್ಲದೇ ರೈತಾಪಿ ವರ್ಗದ ಅನುಕೂಲಕ್ಕಾಗಿ ಪ್ರತಿವರ್ಷ ಒಂದು ತಿಂಗಳ ಕಾಲ ರೈತಜಾತ್ರೆಯನ್ನು ನೆಡಿಸಿಕೊಡುತ್ತಿದ್ದರು.
ಪ್ರಶಸ್ತಿಗಳು
ಜಂಗಮ, ಸಮಾಜದ ಯಾವುದೇ ಪ್ರಖ್ಯಾತಿ-ಪುರಸ್ಕಾರಕ್ಕೆ ಆಸೆ ಪಡೆದೆ ಮುನ್ನೆಡೆದರೂ ಅವರ ಕಾರ್ಯಕ್ಕೆ ಋಣಭಾರ ಸಲ್ಲಿಸುವ ಹೊಣೆ ಸಮಾಜದ್ದು. ಶ್ರೀಗಳ ಸಮಾಜಿಮುಖಿ ಜೀವನಕ್ಕೆ ಪದ್ಮಭೂಷಣ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ. 1965 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಕೂಡ ಪಡೆದಿದ್ದಾರೆ. ಶ್ರೀಗಳ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ `ಭಾರತ ರತ್ನ' ಪ್ರಶಸ್ತಿ ನೀಡಬೇಕು ಎಂಬುದು ಇಡೀ ಕನ್ನಡ ಜನತೆಯ ಬಯಕೆ.
ಆರೋಗ್ಯ ಸಮಸ್ಯೆ
2016 ರಿಂದ ಶ್ರೀಗಳ ಆರೋಗ್ಯದಲ್ಲಿ ಏರು-ಪೇರು ಆಗಲು ಶುರುವಾಯಿತು. ಜಾಂಡೀಸ್, ನ್ಯೂಮೋನಿಯಾ ಮುಂತಾದ ಹಲವು ಇನಫೆಕ್ಷನ್ ಗಳಿಂದ ಬಳಲಿದ ಶ್ರೀಗಳು ನಂತರ ಒಂದು ವರ್ಷದೊಳಗೆ ಚೇತರಿಸಿಕೊಂಡರು. 2018 ಡಿಸೆಂಬರ್ನಲ್ಲಿ ಲಿವರ್ ಸೋಂಕಿಗೆ ತುತ್ತಾದ ಶ್ರೀಗಳು ಲಿವರ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಟ್ಟರು. 2019 ಜನೇವರಿಯಲ್ಲಿ ಶ್ವಾಸಕೋಶ ಸಮಸ್ಯೆಯಿಂದ ಬಳಲಿದ ಶ್ರೀಗಳು ಚೆನ್ನೆನ ಆಸ್ಪತ್ರೆಗೆ ದಾಖಲಾಗಿ ಹಿಂತುರಿಗಿದರು.
ಆರದ ಚೇತನ
ಶ್ರೀಗಳು ಜನೇವರಿ 21,2019ರ ರಂದು ಮಧ್ಯಾಹ್ನ ಇಹಯಾತ್ರೆ ಮುಗಿಸಿದರು. ಶ್ರೀಗಳು ದೈಹಿಕಾವಾಗಿ ದೂರವಾದರೂ ತಮ್ಮ ಕಾರ್ಯಗಳ ಮೂಲಕ ಸದಾ ಬೆಳುಗುತ್ತಾರೆ. ಲಕ್ಷಾಂತರ ವಿಧ್ಯಾರ್ಥಿಗಳ ಸ್ಮೃತಿಪಟಲದಲ್ಲಿ ಜ್ಞಾನವಾಗಿ, ಸಾವಿರಾರು ಭಕ್ತರ ಹೃದಯದಲ್ಲಿ ಅರಿವಿನ ಜ್ಯೋತಿಯಾಗಿ ಅದಮ್ಯವಾಗಿ ಅನಂತಕಾಲ ಬೆಳುಗುತ್ತಾರೆ.
ಅಂಕಿ-ಅಂಶಗಳು,ವಿಶೇಷ
ಪೂರ್ವಾಶ್ರಮ ಹೆಸರು -ಶಿವಣ್ಣ
1922- ಫ್ರೌಢಶಾಲಾ ಶಿಕ್ಷಣಕ್ಕೆ ತುಮಕೂರಿಗೆ ಬಂದರು
1926- ಮೆಟ್ರಿಕುಲೇಷನ್ ಪೂರ್ಣ
1927- ಸಿದ್ಧಗಂಗಾ ಮಠದ ಸಂಪರ್ಕಕ್ಕೆ ಬಂದರು
1927- ಸಾಮಾನ್ಯ ಪರೀಕ್ಷೆ ಉತ್ತೀರ್ಣ ಮತ್ತು ಪದವಿ ಸೇರ್ಪಡೆ
1930- ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು
1965-ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪ್ರದಾನ
1975- ಎರಡು ಸಾವಿರ ಮಕ್ಕಳಿಗಾಗಿ ಶಾಲೆ ತೆರೆದರು.
1977 - ನಾಲ್ಕು ಸಾವಿರ ದಾಟಿದ ಶಾಲಾ ಮಕ್ಕಳು
2007-ಕರ್ನಾಟಕ ರತ್ನ ಪ್ರಶಸ್ತಿ
2015-ಭಾರತ ಸರ್ಕಾರದ ಪದ್ಮಭೂಷಣ
128 - ಶೈಕ್ಷಣಿಕ ಸಂಸ್ಥೆಗಳು
2255 -ಶಿಕ್ಷಕ ಮತ್ತು ಭೋಧಕ ವರ್ಗ
25000- ಪ್ರತಿದಿನ ದಾಸೋಹ ಮಾಡುವ ಭಕ್ತಾದಿಗಳು
250000-ಪ್ರತಿದಿನ ವಿಧ್ಯಾರ್ಥಿಗಳಿಗೆ ಊಟಕ್ಕೆ ತಗುಲುವ ವೆಚ್ಚ.
ಎಷ್ಟು ಬರೆದರೂ ಸಾಲುವುದಿಲ್ಲ ಶ್ರೀಗಳ ಅನ್ನದಸೋಹ ಹಾಗೂ ಅಕ್ಷರ ದಾಸೋಹದ ಬಗ್ಗೆ.
ಶ್ರೀಗಳ ಪಾದಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ, ವಂದನೆಗಳೊಂದಿಗೆ.